Home

ಹೊಸದುರ್ಗ ಪುರಸಭೆಯ ಅಧಿಕೃತ ಅಂತರ್ಜಾಲ ತಾಣಕ್ಕೆ ಸುಸ್ವಾಗತ

                                                                       :- ಹೊಸದುರ್ಗ ಪುರಸಭೆಯ ಪ್ರಮುಖ ಧ್ಯೇಯೋದ್ದೇಶಗಳು :-  

                           ಹೊಸದುರ್ಗ ಪಟ್ಟಣದ ನಾಗರೀಕರ ಪ್ರಮುಖ ಮೂಲಭೂತ ಅವಶ್ಯಕತೆಗಳಾದ ಶುದ್ಧ ಕುಡಿಯುವ ನೀರು, ಬೀದಿ ದೀಪ ಹಾಗೂ ಪರಿಸರ                                                                         ನೈರ್ಮಲ್ಯದ ಬಗ್ಗೆ ಪುರಸಭೆಯು ಪ್ರಮುಖ ಆದ್ಯತೆ ನೀಡಿರುತ್ತದೆ.

  • ಪಟ್ಟಣದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು.
  • ಭೂಮಿಯ ಉಪಯೋಗವನ್ನು ನಿಯಂತ್ರಿಸುವುದು.
  • ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು.
  • ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸುವುದು.
  • ಮನೆ ಬಳಕೆ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ನೀರಿನ ಸಂಪರ್ಕ ಒದಗಿಸುವುದು.
  • ಸಾರ್ವಜನಿಕರ ಆರೋಗ್ಯ ,ನೈರ್ಮಲ್ಯ ಕಾಪಾಡುವುದು.
  • ಪಟ್ಟಣದಲ್ಲಿ ದುರ್ಬಲ ವರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.
  • ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ.
  • ಪಟ್ಟಣ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ ಹಾಗೂ ನಗರದ ಬಡತನ ನಿವಾರಣೆ.
  • ಬೀದಿ ದೀಪ, ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯಗಳಂತ ಮೂಲ ಸೌಕರ್ಯಗಳನ್ನು ಒದಗಿಸುವುದು.
  • ಸ್ಮಶಾನ ಮತ್ತು ಸ್ಮಶಾನ ಭೂಮಿ, ಅಂತ್ಯ ಸಂಸ್ಕಾರ, ಸುಡುವಿಕೆಗೆ ಭೂಮಿ ಮತ್ತು ವಿದ್ಯುತ್  ಚಿತಾಗಾರ ಸೌಕರ್ಯಗಳನ್ನು ಒದಗಿಸುವುದು.
  • ಜನನ-ಮರಣ ನೊಂದಣಿಯು ಸೇರಿದಂತೆ ಮುಖ್ಯವಾದ ಜನನ ಮತ್ತು ಮರಣ ಅಂಕಿ ಅಂಶಗಳನ್ನು ಒದಗಿಸುವುದು.
  • ಕಸಾಯಿ ಖಾನೆಗಳ ನಿಯಂತ್ರಣ.
  • ಸರ್ಕಾರದ ಮಂಜೂರಾತಿಗೆ ಹಾಗೂ ಕರ್ನಾಟಕ ಪೌರ ಸಭೆಗಳ ಅಧಿನಿಯಮ 1964 ಕ್ಕೆ ಒಳಪಟ್ಟು ಸ್ಥಳೀಯವಾಗಿ ತೆರಿಗೆ ವಿಧಿಸುವ, ತೆರಿಗೆ ಸಂಗ್ರಹಿಸುವ ಅಧಿಕಾರ.
  • ಆಸ್ತಿ ತೆರಿಗೆ, ಜಾಹಿರಾತು ತೆರಿಗೆ ಮತ್ತಿತರ ಶುಲ್ಕಗಳ ವಸೂಲಾತಿಯ ಮೇಲ್ವಿಚಾರಣೆ.
  • ರಸ್ತೆ ಮತ್ತು ಬೀದಿ ದೀಪಗಳ ದುರಸ್ಥಿ ಮತ್ತು ನಿರ್ವಹಣೆ.
  • ಅಪಾಯಕಾರಿ ರೋಗಗಳ ನಿಯಂತ್ರಣ.
  • ಅದರಂತೆ ಈ ಹಂತದಲ್ಲಿ ಪಟ್ಟಣಕ್ಕೆ ಕೆಲ್ಲೋಡು ಗ್ರಾಮದ ವೇದಾವತಿ ನದಿಯಿಂದ ಶುದ್ಧೀಕರಿಸಿದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

  • ಪಟ್ಟಣವು ದಿನೇ ದಿನೇ ಬೆಳೆಯುತ್ತಿದ್ದು ಪಟ್ಟಣದಲ್ಲಿ ದೈನಂದಿನ ಸ್ವಚ್ಛತೆ ಕಾಪಾಡುವ ಸಲುವಾಗಿ ಸಂಗ್ರಹವಾಗುವ ತ್ಯಾಜ್ಯ ವಸ್ತುವನ್ನು ಪಟ್ಟಣದಿಂದ 5 ಕಿ.ಮೀ. ಅಂತರದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸಲಾಗುತ್ತಿದ್ದು ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಈಗಾಗಲೇ ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತವಾಗಿ ಪಟ್ಟಣದ 03 ವಾರ್ಡ್ ಗಳಲ್ಲಿ  ಮನೆ - ಮನೆಗಳಿಗೆ ಪುರಸಭೆಯ ಪೌರಕಾರ್ಮಿಕರುಗಳು ಆಟೋ ಟಿಪ್ಪರ್, ತಳ್ಳುವ ಗಾಡಿಗಳೊಂದಿಗೆ ಭೇಟಿ ನೀಡಿ ಕಸ ಸಂಗ್ರಹಿಸುವ ಕಾರ್ಯವನ್ನೂ ಸಹ ಮಾಡಲಾಗುತ್ತಿದ್ದು ಉಳಿದ ವಾರ್ಡ್ ಗಳಲ್ಲೂ ಸಹ ಇದೇ ರೀತಿ ಅತೀ ಶೀಘ್ರದಲ್ಲೇ ವ್ಯವಸ್ಥಿತವಾಗಿ ನಡೆಸಲಾಗುವುದು. ಪೌರ ಘನತ್ಯಾಜ್ಯ ವಸ್ತು ವ್ಯವಸ್ಥಾಪನೆ ಮತ್ತು ನಿರ್ವಹಣೆ 2000 ನಿಯಮಗಳ ಪ್ರಕಾರ ಹಂತ ಹಂತವಾಗಿ ಕಾರ್ಯಕ್ರಮಗಳನ್ನೂ ಸಹ ಹಮ್ಮಿಕೊಳ್ಳಲಾಗುತ್ತಿದೆ.

  • ಸರ್ಕಾರದ ವಿವಿಧ ಯೋಜನೆಗಳಾದ ಎಸ್.ಎಫ್.ಸಿ., ಬಿ.ಆರ್.ಜಿ.ಎಪ್., ಸಿ.ಎಂ.ಎಸ್.ಎಂ.ಟಿ.ಡಿ.ಪಿ, 13 ನೇ ಹಣಕಾಸು ಹಾಗೂ ಇನ್ನಿತರ ಯೋಜನೆಗಳಡಿಯಲ್ಲಿ ಪಟ್ಟಣದ ಪ್ರಮುಖ ಅಭಿವೃದ್ಧಿ ಅಭಿವೃದ್ಧಿ ಕಾಮಗಾರಿಗಳನ್ನು ಸಹ ಹಮ್ಮಿಕೊಳ್ಳಲಾಗಿದೆ.

  • ಹಿಂದುಳಿದ ವರ್ಗಗಳ ಅಭಿವೃದ್ಧಿ, ಇತರೇ ಬಡಜನರ ಕಲ್ಯಾಣಾಭಿವೃದ್ದಿ ಹಾಗೂ ಪಟ್ಟಣ ಬಡತನ ನಿರ್ಮೂಲನೆಯ ನಿಟ್ಟಿನಲ್ಲಿ 22.75%, 7.25% ಹಾಗೂ ಎಸ್.ಜೆ.ಎಸ್.ಆರ್.ವೈ ಇತ್ಯಾದಿ ಯೋಜನೆಗಳಡಿಯಲ್ಲಿ ಸದರಿ ವರ್ಗಗಳ ಅಭಿವೃದ್ಧಿಗಾಗಿ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಅಂಗವಿಕಲರ ಅಭಿವೃದ್ದಿಗಾಗಿ ಶೇ. 3 ರ ಯೋಜನೆಯಡಿಯಲ್ಲಿ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ.
      
  • ಸಾರ್ವಜನಿಕರ ಹಿತ ದೃಷ್ಟಿ ಹಾಗೂ ಕಛೇರಿ ಕೆಲಸಗಳ ವ್ಯವಸ್ಥಿತ ನಿರ್ವಹಣೆಯ ಸದುದ್ದೇಶದಿಂದ ಹೊಸದುರ್ಗ ಪುರಸಭೆಯ ಆಡಳಿತ ವ್ಯವಸ್ಥೆಯನ್ನು ಗಣಕೀಕರಣಗೊಳಿಸುವ ಕಾರ್ಯವೂ ಸಹ ಈಗಾಗಲೇ ಪ್ರಗತಿಯ ಹಾದಿಯಲ್ಲಿರುತ್ತದೆ.

  • ಈ ಹಂತದಲ್ಲಿ ಕರ್ನಾಟಕ ಪೌರ ಸುಧಾರಣಾ ಯೋಜನೆಯಡಿ ಪೌರಾಡಳಿತ ನಿರ್ದೇಶನಾಲಯ, ಪೌರ ಸುಧಾರಣಾ ಕೋಶ ಮತ್ತು ಕೆ.ಎಂ.ಡಿ.ಎಸ್., ಬೆಂಗಳೂರು ಇವರುಗಳ ಸಹಯೋಗದೊಂದಿಗೆ ಈಗಾಗಲೇ ಹಲವಾರು ಮಾಹಿತಿಗಳನ್ನು ಗಣಕೀಕರಣಗೊಳಿಸಲಾಗಿದ್ದು ಪಟ್ಟಣದ ಸಾರ್ವಜನಿಕರು ಅವಶ್ಯಕ ಮಾಹಿತಿ ಪಡೆಯಬಹುದಾದ ಸೌಲಭ್ಯ ಒದಗಿಸಲಾಗಿರುತ್ತದೆ. 

ಹೊಸದುರ್ಗ ಪಟ್ಟಣದ ಬಗ್ಗೆ ಸಂಕ್ಷಿಪ್ತ ಮಾಹಿತಿ

ಹೊಸದುರ್ಗ ಪಟ್ಟಣವು 2007 ನೇ ಸಾಲಿನಲ್ಲಿ ಪುರಸಭೆಯಾಗಿ ಪರಿವರ್ತನೆಯಾಯಿತು. ಹೊಸದುರ್ಗ ಪುರಸಭಾ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು, 23 ಜನ ಚುನಾಯಿತ ಸದಸ್ಯರುಗಳಿರುತ್ತಾರೆ. ಹಾಗೂ 04 ಜನ ನಾಮ ನಿರ್ದೇಶಿತ ಸದಸ್ಯರುಗಳಿರುತ್ತಾರೆ. 2001 ನೇ ಜನಗಣತಿಯ ಪ್ರಕಾರ ಹೊಸದುರ್ಗ ಪಟ್ಟಣದ ಜನ ಸಂಖ್ಯೆಯು 22481ಇರುತ್ತದೆ. ಹೊಸದುರ್ಗ ಪುರಸಭೆ ವ್ಯಾಪ್ತಿಯು 16.00 ಚದುರ ಕಿಲೋಮೀಟರ್ ಗಳಿರುತ್ತದೆ. ಹೊಸದುರ್ಗ ಪಟ್ಟಣದಿಂದ ರಾಜಧಾನಿ ಬೆಂಗಳೂರು ಸುಮಾರು 200ಕಿ.ಮೀ.ದೂರದಲ್ಲಿರುತ್ತದೆ. ಹೊಸದುರ್ಗ ಪಟ್ಟಣದ ಬಹುತೇಕ ಜನರ ಕಸುಬು ವ್ಯವಸಾಯ ವಾಗಿದ್ದು,ತೆಂಗು ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುತ್ತದೆ. ಕರ್ನಾಟಕದ ಅತ್ಯಂತ ಜನಪ್ರಿಯ ಯಾತ್ರಾ ಸ್ಥಳ ಎಂದೇ ಹೆಸರು ವಾಸಿಯಾಗಿರುವ ಹಾಲು ರಾಮೇಶ್ವರ ಪುಣ್ಯ ಕ್ಷೇತ್ರ ಹೊಸದುರ್ಗ ಪಟ್ಟಣದದಿಂದ ಸುಮಾರು 9ಕಿ.ಮೀ. ದೂರದಲ್ಲಿರುತ್ತದೆ. ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಟೂರಿಸಂ ಲಿಂಕ್ ವೀಕ್ಷಿಸಬಹುದಾಗಿರುತ್ತದೆ. ಹೊಸದುರ್ಗ ಪಟ್ಟಣದಿಂದ ಸುಮಾರು 20 ಕಿ.ಮೀ. ದೂರದಲ್ಲಿ ರೈಲ್ವೇ ನಿಲ್ದಾಣವಿರುತ್ತದೆ ಹಾಗೂ ಇದನ್ನು ಹೊಸದುರ್ಗ ರೋಡ್ ರೈಲ್ವೆ ನಿಲ್ದಾಣ ಎಂದು ಕರೆಯುತ್ತಾರೆ. ಹೊಸದುರ್ಗ ಪಟ್ಟಣದಿಂದ ಸುಮಾರು 6ಕಿ.ಮೀ.ದೂರದಲ್ಲಿ ಬೆಂಗಳೂರು ಮಾರ್ಗದಲ್ಲಿ ಕೆಲ್ಲೋಡು ಗ್ರಾಮದ ವೇದಾವತಿ ನದಿ ತೀರದ ದಡದಲ್ಲಿ 60ಅಡಿ ಎತ್ತರದ ಏಕ ಶಿಲಾ ಕನಕ ಮೂರ್ತಿಯನ್ನು ನಿರ್ಮಿಸಿರುವ ಕಾಮಗಾರಿಯು ಪ್ರಗತಿಯ ಹಂತದಲ್ಲಿರುತ್ತದೆ ಹಾಗೂ ಈ ಸ್ಥಳವು ಪ್ರವಾಸಿ ತಾಣವಾಗಿದ್ದು ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ.


-:ಕೆ.ಎಂ.ಆರ್.ಪಿ. ಗಣಕೀಕರಣ ಯೋಜನೆಯ ಒಂದು ಸಂಕ್ಷಿಪ್ತ ಪರಿಚಯ :-

          ಪೌರ ಸುಧಾರಣಾ ಕೋಶ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯ ಮೇಲುಸ್ತುವಾರಿಯಲ್ಲಿ ಹೊಸದುರ್ಗ ಪುರಸಭೆಯ ಹಲವಾರು ಗಣಕೀಕರಣ ಯೋಜನೆಗಳು ಈಗಾಗಲೇ ಮುಕ್ತಾಯಗೊಂಡಿರುತ್ತವೆ ಹಾಗೂ ಇನ್ನು ಕೆಲ ಗಣಕೀಕರಣ ಯೋಜನೆಗಳು ಪ್ರಗತಿಯ ಹಾದಿಯಲ್ಲಿದ್ದು ಶೀಘ್ರದಲ್ಲಿ ಮುಕ್ತಾಯಗೊಂಡು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿವೆ. ಈಗಾಗಲೇ ಬಹುತೇಕ ಮಾಹಿತಿಯನ್ನು ಕಛೇರಿಯ ಅಂತರ್ಜಾಲ ತಾಣದಲ್ಲಿ ಅಳವಡಿಸಲಾಗಿರುತ್ತದೆ.

  • ಪುರಸಭೆಯ ಅಂತರ್ಜಾಲ ತಾಣ: ಹೊಸದುರ್ಗ ಪುರಸಭೆಯು ತನ್ನದೇ ಆದ ಅಧಿಕೃತ ಅಂತರ್ಜಾಲ ತಾಣ ಹೊಂದಿದ್ದು ಪಟ್ಟಣದ ಸಮಗ್ರ ಮಾಹಿತಿಯೂ ಇದರಲ್ಲಿ ಲಭ್ಯವಿರುತ್ತದೆ. ಕಛೇರಿಯ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಎತ್ತಿ ಹಿಡಿಯುವ ಸದುದ್ದೇಶದಿಂದ ಪೌರ ಸುಧಾರಣಾ ಕೋಶ ಈ ಅಂತರ್ಜಾಲ ತಾಣ ಅಭಿವೃದ್ಧಿ ಪಡಿಸಿದ್ದು ಹೊಸದುರ್ಗ ಪುರಸಭೆಯಿಂದ ಈ  ಅಂತರ್ಜಾಲ ತಾಣ ನಿರ್ವಹಿಸಲಾಗುತ್ತಿದೆ. ಪ್ರಮುಖವಾಗಿ ಸಿಬ್ಬಂದಿ ಮಾಹಿತಿ, ಕೌನ್ಸಿಲ್ ಮಾಹಿತಿ, ಚುನಾಯಿತ ಪ್ರತಿನಿಧಿಗಳ ಮಾಹಿತಿ, ಟೆಂಡರ್ ಮಾಹಿತಿ, ಸಾರ್ವಜನಿಕ ಪ್ರಕಟಣೆ ಕಾಯ್ದೆ, ಮಾಹಿತಿ ಹಕ್ಕು, ಘನತ್ಯಾಜ್ಯ ವಸ್ತು ವಿಲೇವಾರಿ, ಮಳೆ ನೀರು ಕೊಯ್ಲು ಪದ್ಧತಿ, ಪಟ್ಟಣದ ರಸ್ತೆ, ಬೀದಿ ದೀಪ, ಚರಂಡಿ ಇತ್ಯಾದಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳು, ಪಟ್ಟಣದ ಹಣಕಾಸು ಪದ್ಧತಿ ವಿವರ, ಆಯ ವ್ಯಯ, ಸಭಾನಡವಳಿಗಳು ಇನ್ನು ಕೆಲವು ಉಪಯುಕ್ತ ಮಾಹಿತಿಗಳು ಈ ಅಂತರ್ಜಾಲ ತಾಣದಲ್ಲಿ ಲಭ್ಯವಿರುತ್ತದೆ. ಪೌರ ಸುಧಾರಣಾ ಕೋಶದ ಮತ್ತು ಕೆ.ಎಂ.ಡಿ.ಎಸ್.ನ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿ ನಿರ್ವಹಿಸಲಾಗುತ್ತಿರುವ ಎಲ್ಲಾ ಆನ್‌ಲೈನ್ ಅಪ್ಲಿಕೇಷನ್‌ಗಳು ಈ ಅಂತರ್ಜಾಲ ತಾಣದಲ್ಲಿ ದೊರೆಯುವಂತಿದ್ದು ಪಟ್ಟಣದ ನಾಗರೀಕರು ಈ ತಾಣಕ್ಕೆ ಬೇಟಿ ನೀಡಿ ಅವಶ್ಯ ಮಾಹಿತಿ ಪಡೆಯಬಹುದಾಗಿರುತ್ತದೆ.

  • ಜನನ-ಮರಣ ದಾಖಲೆಗಳ ಆನ್ ಲೈನ್ ಅಪ್ಲಿಕೇಷನ್: 1999 ರಿಂದ ಇಲ್ಲಿಯವರೆಗಿನ ಪಟ್ಟಣದ ಎಲ್ಲಾ ಜನನ-ಮರಣ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದ್ದು ಸಾರ್ವಜನಿಕರಿಗೆ ಗಣಕೀಕೃತ ಜನನ-ಮರಣ ದಾಖಲಾತಿಗಳನ್ನು ವಿತರಿಸಲಾಗುತ್ತಿದೆ. ಜನನ-ಮರಣಗಳ ಹಳೆಯ ದಾಖಲಾತಿಗಳ ಡಾಟಾ ಎಂಟ್ರಿ ಕಾರ್ಯವು ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ 1990 ನೇ ಸಾಲಿನಿಂದ 1998 ನೇ ಸಾಲಿನವರೆಗಿನ ದಾಖಲಾತಿಗಳ ಗಣಕೀಕರಣ ಕಾರ್ಯ ಪೂರ್ಣಗೊಳ್ಳಲಿದ್ದು, ಇದರಿಂದ ಸಾರ್ವಜನಿಕರು ತ್ವರಿತವಾಗಿ ಜನನ-ಮರಣ ದಾಖಲಾತಿಗಳನ್ನು ಪಡೆಯುವಲ್ಲಿ ಸಹಕಾರಿಯಾಗಿದೆ.

  • ಪಿ.ಜಿ.ಆರ್. ಆನ್ ಲೈನ್ ಅಪ್ಲಿಕೇಷನ್: ಪಟ್ಟಣದ ನಾಗರೀಕರ ದೈನಂದಿನ ಅವಶ್ಯಕತೆಗಳಾದ ಬೀದಿ ದೀಪ, ಕುಡಿಯುವ ನೀರು, ಸ್ವಚ್ಚತೆ ಇತ್ಯಾದಿ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಕೇಂದ್ರ ಸ್ಥಾಪಿಸಲಾಗಿರುತ್ತದೆ. ಈ ಕುಂದುಕೊರತೆ ಪರಿಹಾರ ಕೇಂದ್ರವು ಪ್ರತಿ ದಿನ 24x7 ಕಾರ್ಯ ನಿರ್ವಹಿಸುತ್ತದೆ.ಸಾರ್ವಜನಿಕರು ಕುಂದುಕೊರತೆ ಪರಿಹಾರ ಕೇಂದ್ರದ ಸಹಾಯ ವಾಣಿ: 08199-232666 ಕ್ಕೆ ಕರೆ ಮಾಡಿ ದೂರು ನೊಂದಾಯಿಸಿಕೊಳ್ಳಬಹುದಾಗಿದೆ ಅಲ್ಲದೆ ತಮ್ಮ ದೂರಿನ ಸ್ಥಿತಿಯ ಬಗ್ಗೆ ಹಂತ ಹಂತದಲ್ಲಿ ತಿಳಿದುಕೊಳ್ಳಬಹುದಾಗಿದೆ. ಅದೇ ರೀತಿ ಈ ಕಛೇರಿ ಅಂತರ್ಜಾಲ ತಾಣಕ್ಕೆ ಬೇಟಿ ನೀಡಿ ಪಿ.ಜಿ.ಆರ್. ಆನ್‌ಲೈನ್ ಅಪ್ಲಿಕೇಷನ್ ಮುಖಾಂತರವೂ ದೂರು ನೊಂದಾಯಿಸಬಹುದಾಗಿರುತ್ತದೆ.ಅಥವಾ ನೇರವಾಗಿ ಕುಂದು ಕೊರತೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ದೂರು ನೊಂದಾಯಿಸಬಹುದಾಗಿರುತ್ತದೆ. ದೂರು ಸ್ವೀಕರಿಸಿದ ನಂತರ ಕುಂದು ಕೊರತೆ ಪರಿಹಾರ ಕೇಂದ್ರದ ನಿರ್ವಾಹಕರು ಒಂದು "Unique Complaint Tracking Number " ನೀಡುವರು. ಇದರ ಸಹಾಯದಿಂದ ನಾಗರೀಕರು ತಮ್ಮ ದೂರಿನ ಸ್ಥಿತಿಯನ್ನು ಹಂತ ಹಂತವಾಗಿ ತಿಳಿದುಕೊಳ್ಳಬಹುದಾಗಿದೆ. ದೂರು ಪರಿಹಾರ ಕಾರ್ಯದ ಪ್ರತಿ ಹಂತದ ಸ್ಥಿತಿಯನ್ನು ಇ-ಮೇಲ್ ಮೂಲಕವೂ ಸಹ ವಿಳಾಸ ನೊಂದಾಯಿಸಿ  ಪಡೆಯಬಹುದಾಗಿರುತ್ತದೆ.

  • ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ ಅನುಷ್ಟಾನ ಕಾರ್ಯ: ಕರ್ನಾಟಕ ಪೌರ ಸುಧಾರಣಾ ಯೋಜನೆಯಡಿ ಹೊಸದುರ್ಗ ಪಟ್ಟಣದಲ್ಲಿ ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ ಅನುಷ್ಟಾನ ಅತೀ ಪ್ರಮುಖ ಯೋಜನೆಯಾಗಿದೆ. ಈ ಹಂತದಲ್ಲಿ ಈಗಾಗಲೇ ಪಟ್ಟಣದ ಎಲ್ಲಾ ಆಸ್ತಿಗಳ ಸರ್ವೆಕಾರ್ಯ ಪೂರ್ಣಗೊಳಿಸಿ, ಆಸ್ತಿಗಳ ವಿವರ (ನಮೂನೆ "ಸಿ") ಡಾಟಾ ಎಂಟ್ರಿ ಮಾಡಿಸಿ ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿಯೇ ಪೌರ ಸುಧಾರಣಾ ಕೋಶದಿಂದ ಲೈವ್ ಮಾಡಲಾಗುವುದು.ಇದರಿಂದ ಪಟ್ಟಣದ ಆಸ್ತಿಗಳನ್ನು ಸುಲಭವಾಗಿ ಹುಡುಬಹುದಾಗಿದ್ದು, ಆಸ್ತಿ ತೆರಿಗೆ ವಿವರ ಗಳನ್ನು ಸಹ ಸಾರ್ವಜನಿಕರು ಆನ್‌ಲೈನ್ ಮುಖಾಂತರವೇ ಪಡೆಯಬಹುದಾಗಿರುತ್ತದೆ ಹಾಗೂ ಆನ್ ಲೈನ್ ಮೂಲಕ ಆಸ್ತಿತೆರಿಗೆ ಪಾವತಿಸಬಹುದಾಗಿದ್ದು ಪಟ್ಟಣದ ನಾಗರೀಕರು ಶೀಘ್ರದಲ್ಲಿಯೇ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿರುತ್ತದೆ.

    ನಿಧಿ ಆಧಾರಿತ ದ್ವಿ-ನಮೂದು ಸಂಚಯನ ಲೆಕ್ಕ ಪದ್ದತಿ. : ಹೊಸದುರ್ಗ ಪುರಸಭೆಯಲ್ಲಿ ನಿಧಿ ಆಧಾರಿತ ದ್ವಿನಮೂದು ಸಂಚಯನ ಲೆಕ್ಕ ಪದ್ಧತಿಯನ್ನು ಈಗಾಗಲೇ ಗಣಕೀಕರಣಗೊಳಿಸಲಾಗಿದ್ದು  ಈ ಆನ್‌ಲೈನ್ ಅಪ್ಲಿಕೇಷನ್‌ ಮುಖಾಂತರ ನಗರ ಸ್ಥಳೀಯ ಸಂಸ್ಥೆಯ ಎಲ್ಲಾ ಯೋಜನೆಗಳ ಆರ್ಥಿಕ ಅಂಕಿ ಅಂಶಗಳನ್ನು ಕಛೇರಿಯ ಕೆ.ಎಂ.ಆರ್.ಪಿ. ಯೋಜನೆಯ ಲೆಕ್ಕಿಗರು ದಿನಂಪ್ರತಿ ಕಾಲೋಚಿತ ಗೊಳಿಸುತ್ತಿದ್ದು ಕಛೇರಿಯ ಆಯ-ವ್ಯಯದ ಸಮರ್ಪಕ ನಿರ್ವಹಣೆಗೆ ಸಹಕಾರಿಯಾಗಿದೆ. ಈ ಆನ್‌ಲೈನ್ ಅಪ್ಲಿಕೇಷನ್ ಮುಖಾಂತರ ವಾರ್ಷಿಕ ಕಾರ್ಯ ನಿರ್ವಹಣಾ ವರದಿಯನ್ನೂ ಸಹ ಪಡೆಯಬಹುದಾಗಿದ್ದು ಕಛೇರಿಯ ಎಲ್ಲಾ ಆರ್ಥಿಕ ಚಟುವಟಿಕೆಗಳ ಸವಿವರವಾದ ವರದಿಯೂ ಸಹ ಸಾರ್ವಜನಿಕರಿಗೆ ಲಭ್ಯವಿರುತ್ತದೆ.

  • ಇತರೆ ಆನ್‌ಲೈನ್ ಅಪ್ಲಿಕೇಷನ್‌ಗಳು:  ಸಿ.ಎಂ.ಎಸ್.ಎಂ.ಟಿ.ಡಿ.ಪಿ, ಆಶಾಕಿರಣ ಮಾಹಿತಿ, ಎಸ್.ಜೆ.ಎಸ್.ಆರ್.ವೈ, ಎಸ್.ಎಲ್.ಬಿ, ನಮ್ಮ ಮನೆ, ಎಫ್.ಬಿ.ಎ.ಎಸ್. ಜನನ-ಮರಣ ಇತ್ಯಾದಿ ಪ್ರಮುಖ ಆನ್ ಲೈನ್ ಅಪ್ಲಿಕೇಷನ್ ಗಳನ್ನು ಪೌರಸುಧಾರಣಾ ಕೋಶ ಮತ್ತು ಕೆ.ಎಂ.ಡಿ.ಎಸ್. ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಲಾಗಿದ್ದು ಕಛೇರಿಯ ಕೆಲಸಗಳ ಸುಲಭ ನಿರ್ವಹಣೆಗೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಈ ಆನ್‌ಲೈನ್ ಅಪ್ಲಿಕೇಷನ್‌ಗಳ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಘನತ್ಯಾಜ್ಯ ವಸ್ತು ನಿರ್ವಹಣೆ ಕುರಿತು :-

ಹೊಸದುರ್ಗ ಪುರಸಭಾ ವ್ಯಾಪ್ತಿಯಲ್ಲಿ ಪ್ರತಿ ನಿತ್ಯ ಸುಮಾರು 9 ಟನ್ ಘನ ತ್ಯಾಜ್ಯ ವಸ್ತು ಉತ್ಪತ್ತಿಯಾಗುತ್ತಿದೆ. ಪುರಸಭೆಯು ನೆಲ ಭರ್ತಿ ಜಾಗವನ್ನು ಹೊಂದಿದ್ದು ಪಟ್ಟಣದಿಂದ ಸುಮಾರು 5 ಕಿ.ಮೀ. ಅಂತರದಲ್ಲಿರುತ್ತದೆ. ಪುರಸಭೆಯಲ್ಲಿ 20 ಜನ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಪುರಸಭೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಪ್ರತಿನಿತ್ಯ ಸುಮಾರು 5 ಟನ್ ಘನತ್ಯಾಜ್ಯ ವಸ್ತುವನ್ನು ಸಂಗ್ರಹಿಸಿ ನೆಲಭರ್ತಿ ಜಾಗಕ್ಕೆ 2 ಟ್ರ್ಯಾಕ್ಟರ್ ಗಳ ಮುಖಾಂತರ ಸಾಗಿಸಲಾಗುತ್ತದೆ. ಪ್ರಸ್ತುತ ವಾರ್ಡ್ ನಂ.1 ರಿಂದ ವಾರ್ಡ್ ನಂ. 3 ರವರೆಗೆ ಮನೆ ಮನೆ ಕಸ ಸಂಗ್ರಹಣೆ ಕಾರ್ಯಕ್ರಮ ಈಗಾಗಲೇ ಯಶಸ್ವಿಯಾಗಿ ನಡೆಯುತ್ತಿರುತ್ತದೆ. ಉಳಿದ ವಾರ್ಡ್ ಗಳಲ್ಲೂ ಸಹ ಅತೀ ಶೀಘ್ರದಲ್ಲೇ ವ್ಯವಸ್ಥಿತವಾಗಿ ನಡೆಸಲಾಗುವುದು. ಪೌರ ಘನತ್ಯಾಜ್ಯ ವಸ್ತು ವ್ಯವಸ್ಥಾಪನೆ ಮತ್ತು ನಿರ್ವಹಣೆ 2000 ನಿಯಮಗಳ ಪ್ರಕಾರ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪಟ್ಟಣ ವ್ಯಾಪ್ತಿಯಲ್ಲಿ ಲಾರ್ವಾ ಸಮೀಕ್ಷೆ ಕಾರ್ಯ ಹಮ್ಮಿಕೊಂಡಿರುವ ಕುರಿತು :-

ಇತ್ತೀಚೆಗೆ ಪಟ್ಟಣ ಪ್ರದೇಶಗಳಲ್ಲಿ  ಮಲೇರಿಯಾ, ಡೆಂಗೀ ಮತ್ತು ಚಿಕೂನ್ ಗುನ್ಯಾ ಮುಂತಾದ ಕೀಟಜನ್ಯ ರೋಗಗಳು ಕಾಣಿಸಿಕೊಳ್ಳುತ್ತಿದ್ದು ಪರಿಣಾಮಕಾರಿಗಾಗಿ ನಿಯಂತ್ರಿಸುವ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ ರವರ ಆದೇಶದ ಮೇರೆಗೆ ಹೊಸದುರ್ಗ ಪಟ್ಟಣ ವ್ಯಾಪ್ತಿಯಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿರುವ ಮನೆಗಳಲ್ಲಿ ಲಾರ್ವಾ ಸಮೀಕ್ಷೆ ಕಾರ್ಯವನ್ನು ಹಮ್ಮಿಕೊಂಡಿದ್ದು, ತಮ್ಮ ಮನೆಗಳಿಗೆ ಸಮೀಕ್ಷೆಗೆ ಬಂದಂತಹ ಸಂಧರ್ಭದಲ್ಲಿ ಸಾರ್ವಜನಿಕರು ಸಹಕರಿಸಲು ಕೋರಿದೆ.       

Office Address :

Town Municipal Council, 2nd Road , Hosadurga-577527. Chitradurga Dist. Ph : 08199-230221, 232255.

E-mail Id : itstaff_ulb_hosadurga@yahoo.com 

:- ಪ್ರಮುಖ ಸುದ್ದಿಗಳು :-

  1. ದಿನಾಂಕ: 03-09-2012 ರಂದು ನಡೆದ ಹೊಸದುರ್ಗ ಪುರಸಭಾ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶ್ರೀ ಎನ್. ಜಬೀವುಲ್ಲಾ ಇವರು ಆಯ್ಕೆಯಾಗಿರುತ್ತಾರೆ.
  2. ಹೊಸದುರ್ಗ ಪುರಸಭಾ ವ್ಯಾಪ್ತಿಯಲ್ಲಿ ಹಿರಿಯೂರು ರಸ್ತೆ ಮಾರುತಿ ನಗರ ಆಶ್ರಯ ಬಡಾವಣೆಯಲ್ಲಿ ಬರುವ ನಿವೇಶಣಗಳ ಬಹಿರಂಗ ಹರಾಜು ಕಾರ್ಯಕ್ರಮವನ್ನು ದಿನಾಂಕ: 25-02-2013 ರಂದು ನಿಗಧಿಪಡಿಸಿದ್ದು, ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.  
  3. ಹೊಸದುರ್ಗ ಪುರಸಭಾ ವ್ಯಾಪ್ತಿಯ ಎಲ್ಲಾ ಆಸ್ತಿ ಮಾಲಿಕರಿಗೆ, ಅನುಭೋಗದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಭೌಗೋಳಿಕ ಅಸ್ತಿ ತೆರಿಗೆ ಪದ್ದತಿ ಯೋಜನೆಯಡಿ   ಹೊಸದುರ್ಗ ಪುರಸಭಾ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಸರ್ವೆ ಕಾರ್ಯ ಪೂರ್ಣಗೊಳಿಸಿ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ಸಂಗ್ರಹಿಸಲಾದ ಮಾಹಿತಿಯನ್ನು ನಮೂನೆ 'ಸಿ' ಯಲ್ಲಿ ನಮೂದಿಸಲಾಗಿರುತ್ತದೆ. ಆಸ್ತಿ ತೆರಿಗೆ ನಮೂನೆ 'ಸಿ' ಸಾರ್ವಜನಿಕ ಪ್ರತಿಯನ್ನು ಎಲ್ಲಾ ಅಸ್ತಿ ಮಾಲಿಕರಿಗೆ ಜಾರಿ ಮಾಡಲಾಗುತ್ತಿದ್ದು, ಆಸ್ತಿ ಮಾಲಿಕರು ತಮ್ಮ ಅಸ್ತಿಗೆ ಸಂಬಂಧಿಸಿದ ಸಂಗ್ರಹಿಸಿದ ಮಾಹಿತಿಯ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ದಿನಾಂಕ:18-10-2012 ರೊಳಗಾಗಿ ಕಛೇರಿಗೆ ಲಿಖಿತ ರೂಪದಲ್ಲಿ ಸಲ್ಲಿಸತಕ್ಕದ್ದು, ತದನಂತರ ಬಂದ ಅಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಈ  ವೆಬ್ ಪುಟದ ನಿರ್ವಾಹಕರು : ಶ್ರೀ ಸಿ. ಚಂದ್ರಪ್ಪ, ಕೆ.ಎಂ.ಎ.ಎಸ್., ಮುಖ್ಯಾಧಿಕಾರಿ, ಪುರಸಭೆ, ಹೊಸದುರ್ಗ.

ಅಂತಿಮ ತಿದ್ದುಪಡಿ ದಿನಾಂಕ: 09-05-2013.



No. Of Visitors :
Last Updated   : 19/05/2013  Release History
Release 2.0.0, Powered By Karnataka Municipal Data Society & maintained by Hosadurga TMC
This website can best viewed with the resolution 1024 * 768 using Internet Explorer 7.0 or above.
Valid CSS!